ಬೆಳಗಾವಿ:- ರಸ್ತೆ ಬದಿಯ ಬಾವಿಗೆ ಮಣ್ಣು ತುಂಬಿದ ಟಿಪ್ಪರ್ ಬಾವಿಗೆ ಬಿದ್ದ ಘಟನೆ ಸಂಭವಿಸಿದೆ.
ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ಮಣ್ಣು ತುಂಬಿರುವ ಬೃಹತ್ ವಾಹನ ಟಿಪ್ಪರ್ ಇಕ್ಕಟ್ಟಾದ ರಸ್ತೆಯ ಪಕ್ಕದಲ್ಲಿ ಇದ್ದ ಬಾವಿಗೆ ಬಿದ್ದಿರುವ ಘಟನೆ ನಡೆದಿದೆ.
ಸಂಬರಗಿ ಗ್ರಾಮದಿಂದ ನಾಗನೂರಿಗೆ ಹೋಗುವ ರಸ್ತೆಯ ಪಕ್ಕದಲ್ಲಿ ಇರುವ ಬಾವಿಗೆ ಬಿದ್ದ ಪರಿಣಾಮವಾಗಿ ಚಾಲಕನಿಗೆ ತಲೆಗೆ ಹಾಗೂ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಳಾಗಿವೆ.
ತನ್ನ ಸಮಯಪ್ರಜ್ಞೆಯಿಂದ ಟಿಪ್ಪರ್ ನ ಗಾಜು ಒಡೆದು ನೀರಿದ್ದ ಬಾವಿಯಲ್ಲಿ ಮುಳುಗುವ ಸ್ಥಿತಿಯಲ್ಲಿದ್ದ ಟಿಪ್ಪರ್ ನಿಂದ ಹರಸಾಹಸ ಪಟ್ಟು ಮೇಲೆ ಬಂದು ಸ್ಥಳೀಯರ ಸಹಾಯದಿಂದ ಚಾಲಕನು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಗಂಭೀರ ಗಾಯಗೊಂಡ ಚಾಲಕನಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ.
ಈ ರೀತಿಯ ಘಟನೆಗಳು ಪದೇ ಪದೇ ಸಂಭವಿಸುತ್ತಿರುವುದು ಪ್ರಮುಖವಾಗಿ ರಸ್ತೆ ಪಕ್ಕದ ಬಾವಿಗಳನ್ನು ಮುಚ್ಚದೆ ಇರುವುದರಿಂದ ಹಾಗೂ ಸುರಕ್ಷಿತ ತಡೆಗೋಡೆಗಳನ್ನು ನಿರ್ಮಿಸದೇ ಇರುವುದರಿಂದ ಎಂಬುದು ಎಲ್ಲರೂ ಗಮನಿಸಬೇಕಾದ ವಿಷಯವಾಗಿದೆ.
ಇಂಥ ಘಟನೆಗಳು ಸಂಭವಿಸಿ ಅನೇಕ ಅಮಾಯಕ ಜೀವಗಳು ಬಲಿಯಾದ ನಿದರ್ಶನಗಳಿವೆ ಈ ಬಲಿಯಾದ ಜೀವಿಗಳಿಗೆ ಬೆಲೆಯೇ ಇಲ್ಲವಾ?? ಅಮಾಯಕ ಜೀವಗಳ ಸಾವಿಗೆ ಯಾರು ಹೊಣೆಗಾರರು ಎಂಬುದಕ್ಕೆ ಸ್ಥಳೀಯ ಆಡಳಿತ ಹಾಗೂ ಸರ್ಕಾರವೇ ಉತ್ತರಿಸಬೇಕಾಗಿದೆ.
ಗಮನಿಸಬೇಕಾದ ಅಂಶವೆಂದರೆ ನಾಗನೂರು ರಸ್ತೆಯ ಪಕ್ಕದಲ್ಲಿ ಅನಾಹುತಕಾರಿ ಬಾವಿ ಇರುವ ವಿಷಯ ಗ್ರಾಮ ಪಂಚಾಯತಿ ಗಮನಕ್ಕೆ ಇದ್ದರೂ ಅನಾಹುತ ತಡೆಯುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಯಾವುದೇ ರೀತಿಯ ಕ್ರಮಕ್ಕೆ ಮುಂದಾಗದೆ ಇರುವುದು ವಿಪರ್ಯಾಸದ ಸಂಗತಿಯಾಗಿದೆ.
ಈ ಕುರಿತು ಸ್ಥಳೀಯರಾದ ಲಕ್ಷ್ಮಣ ಸೊಡ್ಡಿಯವರು ಬೇಜವಾಬ್ದಾರಿ ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಕ್ಷಣ ಸರ್ಕಾರ ರಸ್ತೆ ಬದಿಯ ಬಾವಿಗಳನ್ನು ಮುಚ್ಚಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಸ್ಥಳೀಯ ಆಡಳಿತಕ್ಕೆ ಬೀಗ ಜಡಿಯುವ ಎಚ್ಚರಿಕೆ ನೀಡಿದರು.
ಅಲ್ಲದೆ ರಸ್ತೆ ಬದಿಯ ಬಾವಿಗಳನ್ನು ಮುಚ್ಚಿಸಲು ಸರ್ಕಾರ ಮುಂದಾಗಬೇಕಾಗಿದೆ ಅಮಾಯಕ ಜೀವಗಳಿಗಾಗುವ ಅನಾಹುತ ತಡೆಯಬೇಕಾಗಿದೆ ಎಂದು ಸರ್ಕಾರ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ವಿರುದ್ಧ ವಾಗ್ದಾಳಿ ನಡೆಸಿದರು.
ಒಟ್ಟಾರೆಯಾಗಿ ಇಂಥ ಅನಾಹುತಗಳನ್ನು ತಪ್ಪಿಸಲು ಗ್ರಾಮ ಪಂಚಾಯತಿ ಹಾಗೂ ಸರ್ಕಾರ ಯಾವ ರೀತಿಯ ಕ್ರಮಕ್ಕೆ ಮುಂದಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.